
ನಮ್ಮೂರ ವಾರ್ತೆ ಪತ್ರಿಕೆಯ 9 ನೇ ವರ್ಷದ ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕ್ಯಾಪ್ಟನ್ ಶ್ರೀ ಎನ್.ಎ. ಗೋಪಾಲ್ರವರಿಗೆ ಗೌರವಪೂರ್ವಕವಾಗಿ ಸಲ್ಲಿಸಲಾದ.:ಸನ್ಮಾನ ಪತ್ರ:ಕೊಪ್ಪ ತಾಲ್ಲೂಕು ನಿಲುವಾಗಿಲು ಗ್ರಾಮದ ದಿವಂಗತ ಅಚ್ಚಣ್ಣ ಶೆಟ್ಟಿ ಮತ್ತು ವಾರಿಜಮ್ಮ ದಂಪತಿಯ ಪ್ರಥಮ ಪುತ್ರರಾಗಿ ಜನಿಸಿದ ತಾವು ನಿಲುವಾಗಿಲಿನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಹರಿಹರಪುರದಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಮೇ 1980ರಲ್ಲಿ ಭಾರತೀಯ ಸೇನೆಗೆ ನಿಯೋಜನೆಗೊಂಡಿರಿ.

ಬೆಳಗಾವಿಯ ಮರಾಠ ಲೈಟ್ ಇನ್ಫೆಂಟ್ರಿ ಸೆಂಟರ್ ನಲ್ಲಿ ಪ್ರಾರಂಭಿಕ ಸೈನಿಕ ಶಿಕ್ಷಣದ ನಂತರ ದೇಶದ 18 ಮರಾಠ ಲೈಟ್ ಇನ್ ಫೆಂಟ್ರಿಯಲ್ಲಿ ಪಾಲ್ಗೊಂಡು ಸುದೀರ್ಘ 33 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಪ್ಲಾಟೂನ್ ಕಮಾಂಡರ್, ಸೈನಿಕ ತರಬೇತಿ ಕೇಂದ್ರದ ಸುಬೇದಾರ್ ಮೇಜರ್ ಆಗಿ ಜವಾಬ್ದಾರಿ ನಿರ್ವಹಿಸಿ ಪಂಜಾಬ್ನ ಆಪರೇಷನ್ ಬ್ಲೂಸ್ಟಾರ್, ಶ್ರೀಲಂಕಾದಲ್ಲಿ ಆಪರೇಷನ್ ಪವನ್, ಅಸ್ಸಾಂನ ಆಪರೇಷನ್ ಬಜರಂಗ್, ಉತ್ತರ ಸಿಕ್ಕಿಂನ ಆಪರೇಷನ್ ಕಾಕ್ಟಸ್ ಲಿಲಿ, ಮಿಜೋರಾಂನ ಆಪರೇಶನ್ ರಿನೋ, ಜಮ್ಮು ಕಾಶ್ಮೀರದಲ್ಲಿ ಆಪರೇಶನ್ ವಿಜಯ್ ಮುಂತದ ಸೈನಿಕ ಕಾರ್ಯಚರಣೆಯಲ್ಲಿ ಭಾಗಿಯಾಗಿ ಸಾಹಸ ಮೆರೆದಿರುವಿರಿ.

ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಸುನಾಮಿ ಅಪ್ಪಳಿಸಿದಾಗ ನಡೆದ ಪರಿಹಾರ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಉತ್ತಮ ಸೇವೆ ಸಲ್ಲಿಸಿರುತ್ತಿರಿ .ಅರುಣಾಚಲ ಪ್ರದೇಶದ ರಾಜಭವನದಲ್ಲಿ ಕಂಟ್ರೋಲರ್ ಆಗಿ, ರಾಜಭವನದ ಉಸ್ತುವಾರಿಯ ಜೊತೆಗೆ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರೀಯ ಮಂತ್ರಿಗಳು ಮತ್ತುಉನ್ನತ ಅಧಿಕಾರಿಗಳ ರಾಜಭವನದ ಭೇಟಿ ಮತ್ತು ವಾಸ್ತವ್ಯದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ ಹೆಗ್ಗಳಿಕೆ ತಮ್ಮದು.ಸೇನೆಯಲ್ಲಿ ಉತ್ತಮ ಸೇವೆಗಾಗಿ ಕಮಾಂಡರ್-ಇನ್-ಚೀಫ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಇವರ ಪ್ರಶಂಸ ಪತ್ರ, ಈಸ್ಟರ್ನ್ ಆರ್ಮಿ ಕಮಾಂಡರ್ ರವರ ಪ್ರಶಸ್ತಿ ಪತ್ರ ಮತ್ತು ಅರುಣಾಚಲ ಪ್ರದೇಶದ ರಾಜ್ಯ ಪ್ರಶಸ್ತಿ ತಮಗೆ ದೊರೆತಿರುತ್ತದೆ.2013ರಲ್ಲಿ ಸೇವಾ ನಿವೃತ್ತಿಯ ಬಳಿಕ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ಮಾಜಿ ಸೈನಿಕರ ಸಂಘದ ಕ್ಷೇತ್ರಾಧ್ಯಕ್ಷರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಾವು ಪತ್ನಿ ಲತಾ, ಪುತ್ರ ಪ್ರೀತಮ್, ಪುತ್ರಿ ಪ್ರತೀಕ್ಷಾ ಅವರನ್ನೊಳಗೊಂಡ ಪುಟ್ಟ ಸಂಸಾರದೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವಿರಿ.ತಮ್ಮ ಈ ಎಲ್ಲಾ ಸಾಧನೆಗಳನ್ನು ಅಭಿಮಾನಪೂರ್ವಕವಾಗಿ ಅಭಿನಂದಿಸುತ್ತಾ ನಮ್ಮೂರ ವಾರ್ತೆ ಪತ್ರಿಕಾ ಬಳಗದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸುತ್ತಿದ್ದೇವೆ.
Leave a Reply